Product Description
ಸಣ್ಣ ಕತೆ, ಕಾದಂಬರಿ, ಕವಿತೆ, ನಾಟಕ, ವಿಮರ್ಶೆ, ಅನುವಾದಗಳಿಂದ ಸಮೃದ್ಧವಾಗಿರುವ ಡಾ.ಯು.ಆರ್.ಅನಂತಮೂರ್ತಿ ಅವರ ಸಮಗ್ರ ವಾಙ್ಮಯವನ್ನು ಆಪ್ತವಾಗಿ ಅನುಸಂಧಾನ ಮಾಡಿ ಅದರಿಂದ ಮೂಡೂವ ದರ್ಶನವನ್ನು ಕಾಣಿಸುವ ಮಹತ್ವಾಕಾಂಕ್ಷೆ ಈ ಪುಸ್ತಕದಲ್ಲಿ ಕಂಡುಬರುತ್ತದೆ. ಸುಮಾರು ಆರು ದಶಕಗಳ ವಿವಿಧ ಘಟ್ಟಗಳಲ್ಲಿ ವೈವಿಧ್ಯಮಯವಾಗಿ ರೂಪುಗೊಂಡ ಅನಂತಮೂರ್ತಿ ವಾಙ್ಮಯದ ಬಹುಮುಖತೆಯನ್ನೂ ಬಹುಧ್ವನಿಯನ್ನೂ ಸೂಕ್ಷ್ಮವಾಗಿ ಅವಲೋಕಿಸಿರುವ ಟಿ.ಪಿ.ಅಶೋಕ ಅವರ ಈ ಸಮಗ್ರ ಅಧ್ಯಯನವು ನಮ್ಮ ಕಾಲದ ಧೀಮಂತ ಲೇಖಕರೊಬ್ಬರ ಸಿದ್ಧಿ-ಸಾಧನೆಗಳನ್ನು ತೋರಿ ತೂಗಿ ಬೆಲೆಕಟ್ಟುವಲ್ಲಿ ಸಾಕಷ್ಟು ಸಫಲವಾಗಿದೆ. ಆಯಾ ಪ್ರಕಾರಗಳಲ್ಲಿ ಸೂಚಿತವಾಗುವ ಅನನ್ಯತೆಯನ್ನೂ ವಿಶಿಷ್ಟತೆಯನ್ನೂ ಕಾಣಿಸುತ್ತಲೇ ಅವುಗಳ ಸದ್ಯದ ಮತ್ತು ಸಾರ್ವಕಾಲಿಕ ಪ್ರಸ್ತುತತೆಗಳನ್ನು ಮನಗಾಣಿಸಿಕೊಡುವ ಅಶೋಕರ ವಿಮರ್ಶೆಯು ಅನಂತಮೂರ್ತಿಯವರ ಸಮಗ್ರ ಸಾಹಿತ್ಯದ ಆಳ ಅಗಲಗಳನ್ನು ಓದುಗರ ಅನುಭವಕ್ಕೆ ತರುವಲ್ಲಿ ತುಂಬ ಯಶಸ್ವಿಯಾಗಿದೆ. ಬಿಡಿ ಕೃತಿಗಳ ಓದಿನಲ್ಲಿ ಪಡೆದುಕೊಂಡ ಅರಿವನ್ನು ಸಮಗ್ರ ವಾಙ್ಮಯದ ಒಟ್ಟಾರೆ ತಿಳುವಳೀಕೆಗೆ ಹೆಣೆಯುವ, ಸಮಗ್ರ ಸಾಹಿತ್ಯದ ಅಧ್ಯಯನದಲ್ಲಿ ಪಡೆದುಕೊಂಡ ವಿವೇಕದಲ್ಲಿ ಬಿಡಿ ಕೃತಿಗಳ ಸ್ವರೂಪವನ್ನು ಬೆಳಗುವ ಚಲನಶೀಲತೆ ಈ ಪುಸ್ತಕದ ವೈಶಿಷ್ಟ್ಯವಾಗಿದೆ.