Product Description
ಪಂಪ, ಪೊನ್ನ, ರನ್ನ, ಜನ್ನ, ರುದ್ರಭಟ್ಟ-ಕನ್ನಡಿಗರ ಬಾಯಲ್ಲಿ ಕುಣಿದಾಡುವ ಹೆಸರುಗಳು. ಆದರೆ ಅವರ ಕೃತಿಗಳನ್ನು ಓದಿದ ಜನರು ಎಷ್ಟಿದ್ದಾರೆ? ತೀರಾ ಕಡಿಮೆ. ಈ ಸ್ಥಿತಿಗೆ ಒಂದು ಕಾರಣವೆಂದರೆ ಈ ಕವಿಗಳ ಕಾವ್ಯಗಳು ಹಳೆಗನ್ನಡದಲ್ಲಿ ಇವೆ ಎನ್ನುವುದು. ಕಾಲ ಸವೆದಂತೆಲ್ಲ ಪೂರ್ವ ಕಾವ್ಯಗಳೂ ನಮ್ಮಿಂದ ದೂರವಾಗುತ್ತ ಹೋಗುತ್ತವೆ: ಕಾರಣ ಭಾಷೆ ಬದಲಾಗುತ್ತಲೇ ಇರುತ್ತದೆ, ಅದೇ ರೀತಿ ಸಮುದಾಯದ ಆಸಕ್ತಿಗಳು ಕೂಡ. ಆದರೂ ಈ ಕವಿಗಳು ಬರೆದಿಟ್ಟುಹೋದ ಮಹಾಕಾವ್ಯಗಳನ್ನು ನಾವು ಓದುವುದು ಬೇಡವೇ? ಆರಂಭದಲ್ಲೇ ನಮ್ಮನ್ನು ದಿಕ್ಕೆಡಿಸಬಹುದಾದಂಥ ಕಂದ, ವೃತ್ತ, ವಚನಗಳು ಹಾಗೂ ಈಗ ಬಳಕೆಯಲ್ಲಿಲ್ಲದ ಕನ್ನಡದ ಪದಗಳು ನಮ್ಮವೇ ಎನಿಸಬೇಕಾದರೆ ತಿಳಿದವರ ಸಹಾಯ ಅಗತ್ಯ. ಅಂಥ ಕೆಲಸವನ್ನು ಕವಿ ಎಚ್.ಎಸ್.ವಿ. ಯವರು ಮಾಡುತ್ತಲೇ ಬಂದಿದ್ದಾರೆ. ಇದೊಂದು ನವೀಕರಣ ಪ್ರಯತ್ನ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಉತ್ತಮ ಪರಿಶ್ರಮವಿದ್ದು, ಆಧುನಿಕ ಕನ್ನಡದ ವಿಶಿಷ್ಠ ಕವಿಯೂ ಆಗಿರುವ ಎಚ್.ಎಸ್.ವಿ. ಈ ನಿಟ್ಟಿನಲ್ಲಿ ದುಡಿಯುತ್ತಿರುವುದು ನಮ್ಮೆಲ್ಲರ ಭಾಗ್ಯ. ಪ್ರಕೃತ ‘ಪಂಪನ ಆದಿಪುರಾಣದ ತಿಳಿಗನ್ನಡ ಅವತರಣ’ ಅವರ ಇಂಥದೇ ಈ ಮೊದಲಿನ ವಿಕ್ರಮಾರ್ಜುನ ವಿಜಯದ ಅವತರಣದ ಮುಂದುವರಿದ ಹೆಜ್ಜೆ.