Product Description
ತತ್ತ್ವಶಾಸ್ತ್ರ ಚಿಂತನೆಯು ಧುತ್ತೆಂದು ಎಲ್ಲಿಂದಲೋ ಅವತರಿಸಿಬಿಡುವಂಥದಲ್ಲ. ಮಾನವನು ತನ್ನ ಜಗತ್ತನ್ನು ನೋಡುತ್ತಾ, ತನ್ನ ಅನುಭವಗಳನ್ನು ಅರ್ಥೈಸಿಕೊಳ್ಳೂತ್ತಾ, ಒಂದು ಚಿಂತನಧಾರೆಯನ್ನು ಬೆಳೆಸುತ್ತಾನೆ. ವಸ್ತುನಿಷ್ಠ ಪ್ರಪಂಚವನ್ನು ವ್ಯಾಖ್ಯಾನಿಸುವಾಗ ಅವನು ಹಾದುಬಂದಿರುವ ಹಂತಗಳ ಪ್ರತಿಫಲನವಿರುವುದು ಸಹಜ. ಎಲ್ಲ ದೇಶಗಳ ತತ್ತ್ವಶಾಸ್ತ್ರ ಇತಿಹಾಸಕ್ಕೆ ಇದೊಂದು ಸಾಮಾನ್ಯವಾದ ಹಿನ್ನೆಲೆ. ಅದಲ್ಲದೆ ಆಯಾಯ ದೇಶಗಳ ವಿಶಿಷ್ಟ ದಾರ್ಶನಿಕ ದೃಷ್ಟಿಯ ಆರಂಭ ಮತ್ತು ವಿಕಾಸವು ತತ್ತ್ವಶಾಸ್ತ್ರ ಇತಿಹಾಸದ ಮೂಲಸಾಮಗ್ರಿ. ವಿಶೇಷತಃ ಪ್ರಾಚೀನ ಭಾರತ ಮತ್ತು ಪ್ರಾಚೀನ ಗ್ರೀಸ್ ಈ ನಿಟ್ಟಿನಲ್ಲಿ ಪ್ರತ್ಯೇಕವಾಗಿ ತಮ್ಮದೇ ಧಾಟಿಗಳನ್ನನುಸರಿಸಿ ಹಲವು ದಾರ್ಶನಿಕ ಪ್ರಮೇಯಗಳನ್ನು ಬೆಳೆಸಿವೆ. ಮುಂದಿನ ವಿಭಿನ್ನ ವಿಕಾಸಗಳು ತತ್ತ್ವಶಾಸ್ತ್ರದ ಇತಿಹಾಸದಲ್ಲಿ ದಾಖಲಾಗಿವೆ.
ಲೋಕ ತತ್ತ್ವಶಾಸ್ತ್ರ ಮಾಲಿಕೆಯ ಈ ಮೊದಲ ಸಂಪುಟದಲ್ಲಿ ಚಾರಿತ್ರಿಕ ಘಟ್ಟಗಳನ್ನು ಪರಿಚಯಿಸುತ್ತಾ ಎರಡು ಪ್ರಧಾನ ವಾಹಿನಿಗಳಾದ ಭೌತವಾಡ ಮತ್ತು ಭಾವನಾವಾದಗಳ ಉಗಮವನ್ನು ವಿಸ್ತಾರವಾಗಿ ಪ್ರತಿಪಾದಿಸಲಾಗಿದೆ, ಆಕರಗಳನ್ನು ಸಮಗ್ರವಾಗಿ ದಾಖಲಿಸಲಾಗಿದೆ.
ಮಾಲಿಕೆಯ ಸಂಪಾದಕರಾದ ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು ಈ ಸಂಪುಟದ ಲೇಖಕರೂ ಸಹ. ಅವರ ಮೌಲಿಕ ಕೃತಿಗಳು ಭಾರತೀಯ ತತ್ತ್ವಶಾಸ್ತ್ರದ ಇತಿಹಾಸಕ್ಕೆ ಗುಣಾತ್ಮಕ ತಿರುವೊಂದನ್ನು ನೀಡಿರುವುದು ಪ್ರಖ್ಯಾತವಾದ ಸಂಗತಿ. ಅವರ ಹಲವು ಕೃತಿಗಳು ಈಗಾಗಲೆ ಕನ್ನಡದಲ್ಲಿ ಲಭ್ಯವಿವೆ. ಪ್ರಸ್ತುತ ಗ್ರಂಥವು ಅವಕ್ಕೊಂದು ಹೊಸ ಗಮನಾರ್ಹ ಸೇರ್ಪಡೆ. ತತ್ತ್ವಶಾಸ್ತ್ರದ ಸಮಗ್ರ ಅಧ್ಯಯನಕ್ಕೆ ಮಾದರಿ ವಿಧಾನವೊಂದನ್ನು ಸ್ಫುಟವಾಗಿ ನಿರೂಪಿಸಿರುವುದು ಈ ಕೃತಿಯ ವೈಶಿಷ್ಟ್ಯ.
ಅನುವಾದಕಿ ಡಾ. ಎನ್. ಗಾಯತ್ರಿ ಬ್ಯಾಂಕ್ ಅಧಿಕಾರಿ, ಖ್ಯಾತ ಲೇಖಕಿ ಮತ್ತು ಮಹಿಳಾ ಚಳುವಳಿಯ ಸಕ್ರಿಯ ಕಾರ್ಯಕರ್ತೆ. ‘ಅಚಲ’ ಮಹಿಳಾ ಪತ್ರಿಕೆಯ ಸಂಪಾದಕರಾಗಿ ಇಪ್ಪತ್ತೆರಡು ವರ್ಷ ಪತ್ರಿಕೆಯನ್ನು ಮುನ್ನಡೆಸಿದವರು ಕೂಡ. ಅವರ ಹಲವು ಕೃತಿಗಳ ಪೈಕಿ ಇತ್ತೀಚಿನದು ಕ್ಲಾರಾ ಜೆಟ್ಕಿನ್.