Product Description
ಕೃಷಿಯನ್ನು ನಂಬಿ ಬದುಕುತ್ತಿದ್ದ ದೇಶ ನಮ್ಮದು. ಅದೊಂದು ಸಂಸ್ಕೃತಿಯೇ ಆಗಿದ್ದುದರಿಂದ ಜನರಿಗೆ ಅದೊಂದು ಜೀವನಮಾರ್ಗವಾಗಿತ್ತು. ಆದರೆ, ಬಹುರಾಷ್ಟ್ರೀಯ ಕಂಪನಿಗಳ ಕುತಂತ್ರದಿಂದ, ಸರ್ಕಾರದ ತಿರಸ್ಕಾರದಿಂದ ಇಂದು ಕೃಷಿಯು ತನ್ನ ಹಿಂದಿನ ವೈಭವ ಕಳೆದುಕೊಂಡಿದೆ. ಕೃಷಿಯೆಂದರೆ ತಿರಸ್ಕಾರದಿಂದ ಕಾಣುವ, ಮೈನೋಯದ ಗಿಲೀಟು ವೃತ್ತಿಗಳನ್ನು ಹುಡುಕಿಕೊಂಡಿರುವ ಇಂದಿನ ಬಹುಪಾಲು ಯುವಕರಿಗೆ ಕೃಷಿಯೆಂದರೆ ಎಲ್ಲೂ ಸಲ್ಲದವರು ಸೇರುವ ಜಾಗ ! ಆದರೆ, ಶ್ರಮಸಂಸ್ಕೃತಿಯನ್ನೇ ಜೀವನದ ಧ್ಯೇಯವನ್ನಾಗಿಸಿಕೊಂಡು ಚೆಂದದ ಬದುಕು ಕಟ್ಟಿಕೊಂಡ, ಜಗತ್ತಿಗೆ ದಾರಿದೀಪವಾದ ಮಹನೀಯರು ಈ ಕ್ಷೇತ್ರದಲ್ಲಿ ಹಲವರಿದ್ದಾರೆ. ಅವರಲ್ಲಿ ಪ್ರಮುಖರು ಸಾವಯವ ಕೃಷಿತಜ್ಞ, ನಾಡೋಜ ಡಾ|| ಎಲ್. ನಾರಾಯಣ ರೆಡ್ಡಿ. ಎಲ್ಲರ ಪ್ರೀತಿಯ ವರ್ತೂರು ನಾರಾಯಣ ರೆಡ್ಡಿ. ನಾರಾಯಣ ರೆಡ್ಡಿಯವರು ‘ಶ್ರೀ’ ಪದ್ಧತಿಯಲ್ಲಿ ಭತ್ತ ಬೆಳೆಯುವುದನ್ನು ಈ ನಾಡಿಗೆ ಪರಿಚಯಿಸಿದವರು. ಕೃಷಿಯಲ್ಲಿ ಅವರು ಅನೇಕ ಸಂಶೋಧನೆಗಳನ್ನು, ಪ್ರಯೋಗಗಳನ್ನು ನಡೆಸಿದ್ದಾರೆ. ಸಾವಯವ ಕೃಷಿಯಂತೆ ಸಾವಯವ ಜೀವನವಿರಬೇಕು ಎಂಬುದನ್ನು ಪರಿಪಾಲಿಸುತ್ತಿದ್ದಾರೆ. ಸಾವಯವ ಕೃಷಿಯ ಬಗ್ಗೆ ಮಾತನಾಡಲು ಹೆದರುತ್ತಿದ್ದ ಕಾಲದಲ್ಲಿ ಧೈರ್ಯದಿಂದ ಮುನ್ನುಗ್ಗಿ ಮೌನವಾಗಿಯೇ ಸಾವಯವ ಕ್ರಾಂತಿ ಮಾಡಿದ, ಆ ಮೂಲಕ ಹಲವು ಸಾವಯವ ಕೃಷಿಯೋಧರಿಗೆ ಧ್ವನಿಯಾದ ನಾರಾಯಣ ರೆಡ್ಡಿಯವರ ಜೀವನ ಮತ್ತು ಚಿಂತನೆಗಳನ್ನು ಕುರಿತಂತೆ ರಚಿಸಿರುವ ಪುಸ್ತಕವೇ ‘ನೆಲದೊಡಲ ಚಿಗುರು.’