Product Description
'ವಾಗ್ದೇವಿ' ತನ್ನ ಹೊರರೂಪದಲ್ಲಿ 'ಹಳೆಯ', ಸಾಂಪ್ರದಾಯಿಕ ಶೈಲಿಯ ಗದ್ಯ ಕಥಾನಕಗಳಂತೆ ಭಾಸವಾದರೂ ಅದು ತನ್ನ ಮೂಲ ಭೂಮಿಕೆಯಲ್ಲಿ ಮತ್ತು ಉದ್ದೇಶದಲ್ಲಿ 'ಆಧುನಿಕ'ವಾಗಿದೆ. ೧೯೦೫ರಲ್ಲಿ ರಚಿತವಾದ ಈ ಕಾದಂಬರಿಯು ತನ್ನ ವಸ್ತುವಿನ್ಯಾಸದಲ್ಲಿ ಕನ್ನಡ ಕಾದಂಬರಿಯ ಒಂದು ಮಾದರಿಯನ್ನೇ ಮುಂಗಾಣ್ಕೆಯಲ್ಲಿ ತೋರುವಂತಿದೆ. ಮುಂದಿನ ಕಾದಂಬರಿಕಾರರು 'ವಾಗ್ದೇವಿ'ಯಿಂದ ನೇರವಾದ ಪ್ರಭಾವ- ಪ್ರೇರಣೆಗಳನ್ನು ಪಡೆದರು ಎಂದು ಖಚಿತವಾಗಿ ಹೇಳಲು ಬರದಿದ್ದರೂ, ಕನ್ನಡ ಕಾದಂಬರಿಯ ಒಂದು ಧಾರೆ 'ವಾಗ್ದೇವಿ'ಯ ಜಾಡನ್ನು ಹಿಡಿದ ಹಾಗೆ ಕಾಣುತ್ತದೆ. ವಿಡಂಬನಾ ಪ್ರಧಾನವಾದ, ಸಾಮಾಜಿಕ ವಿಮರ್ಶೆಯೇ ಪ್ರಧಾನ ಗುರಿಯಾದ 'ವಾಗ್ದೇವಿ'ಯ ಧಾರೆ ಮುಂದೆ ಶಿವರಾಮ ಕಾರಂತ, ಜಿ.ಬಿ.ಜೋಶಿ, ಬಸವರಾಜ ಕಟ್ಟೀಮನಿ, ಬೀಚಿ ಮೊದಲಾದವರ ಈ ಬಗೆಯ ಬರವಣಿಗೆಗಳಲ್ಲಿ ಮುಂದುವರೆದಿದೆ ಎಂದು ತರ್ಕಿಸಲು ಅವಕಾಶವಿದೆ. ಅದರಲ್ಲೂ ಕಾರಂತರ ಕಾದಂಬರಿಗಳಲ್ಲಿ ಕಂಡುಬರುವ ಅನೇಕ ಧರ್ಮಗುರುಗಳು, ಮಠಾಧಿಪತಿಗಳು, ಸನ್ಯಾಸಿಗಳು 'ವಾಗ್ದೇವಿ'ಯ ಚಂಚಲನೇತ್ರರನ್ನು ಹೋಲುವುದು ಕೇವಲ ಕಾಕತಾಳೀಯವಿರಲಾರದು.
ಬಾಬುರಾಯರ ಕಾದಂಬರಿ ಕೇವಲ ಒಂದು ನಿರ್ದಿಷ್ಟ ಮಠದ ಕಥೆಯಾಗದೆ 'ಮಠ' ಎಂಬ ವ್ಯವಸ್ಥೆಯ ಕಥೆಯೇ ಆಗುತ್ತದೆ. ಇನ್ನೊಂದು ಕಡೆ ಈ ಕಾದಂಬರಿಯು ರಾಜ್ಯವ್ಯವಸ್ಥೆಯು ನಡೆಯುವ ಕ್ರಮವನ್ನೂ ಸೂಕ್ಷ್ಮವಾಗಿ ಬಿಚ್ಚಿಡುತ್ತದೆ. ಶ್ರೇಣೀಕೃತ ಅಧಿಕಾರಿಶಾಹಿ ವ್ಯವಸ್ಥೆಯು ಸಾರ್ವಜನಿಕರೊಂದಿಗೆ ವ್ಯವಹರಿಸುವ ರೀತಿ, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವ ಬಗೆ, ವಿಚಾರಣೆಯ ಶೈಲಿ, ಇಡೀ ವ್ಯವಸ್ಥೆಯನ್ನು ಆವರಿಸಿರುವ ಭ್ರಷ್ಟತೆ, ಲಂಚಗುಳಿತನ ಇವುಗಳ ದಟ್ಟ ಚಿತ್ರಣ ಇಲ್ಲಿದೆ. ಹಳೆಯ ಆಡಳಿತ ಮತ್ತು ನ್ಯಾಯಂಗ ವ್ಯವಸ್ಥೆಗಳ ನೆನಪಿನಲ್ಲಿ ವಸಾಹತುಶಾಹಿ ತಂದ ಹೊಸ ಸಂಸ್ಥೆಗಳ ಸೂಕ್ಷ್ಮ ಪ್ರಸ್ತಾಪವೂ ಇಲ್ಲಿದೆ. 'ವಕೀಲಿ' ಎಂಬ ಹೊಸವೃತ್ತಿಯು ಆ ಕಾಲದಲ್ಲಿ ಪ್ರಾರಂಭವಾಗಿತ್ತಷ್ಟೆ. ಅದರ ಕೆಲವು ಸ್ವಾರಸ್ಯಕರ ಮಾದರಿಗಳನ್ನೂ ಕಾದಂಬರಿ ದಾಖಲಿಸಿದೆ.
ವಾಗ್ದೇವಿಯ ಪಾತ್ರಕಲ್ಪನೆ ಕನ್ನಡ ಕಾದಂಬರಿಯ ಒಟ್ಟೂ ಸಂದರ್ಭದಲ್ಲೂ ಎದ್ದುಕಾಣುವಂತಿದೆ. ಕಾದಂಬರಿಗೆ 'ವಾಗ್ದೇವಿ' ಎಂಬ ಶೀರ್ಷಿಕೆಯನ್ನು ಕೊಟ್ಟಿರುವುದರಲ್ಲೂ ಲೇಖಕರ ಪ್ರತಿಭೆ ಮಿಂಚಿದೆ. ಇಡೀ ಕಾದಂಬರಿಯು ಹಲವು 'ವಾಕ್'ಗಳ ಜೋಡಣೆಯಾಗಿದೆ. ಆದ್ದರಿಂದಲೇ ಬೋಳಾರ ಬಾಬುರಾವ್ ಅವರ 'ವಾಗ್ದೇವಿ' ತನ್ನ ಹೆಸರಿಗೆ ಅನ್ವರ್ಥವಾಗಿದೆ.