Product Description
ಸಹಜೀವಿಗಳಲ್ಲಿ ತೀವ್ರ ಆಸಕ್ತಿ, ಬಾಳಿನ ಕೆಲ ವೈಪರೀತ್ಯಗಳನ್ನು ಎದುರಿಸಲು ಅಗತ್ಯವಿರುವ ಸಿನಿಕತನವಿಲ್ಲದ ಸೂಕ್ಷ್ಮ ವಿನೋದ, ಇವು ಈರಪ್ಪ ಕಂಬಳಿಯವರ ಬರವಣಿಗೆಯ ಜೀವಾಳವಾಗಿದೆ.
ವೈಚಾರಿಕ ಕಣ್ಣು ಕಳೆದುಕೊಂಡಿರುವ ‘ಆಧುನಿಕ’ರೆಂಬ ಕುರುಡರು, ಮೆಜೆಸ್ಟಿಕ್ನಲ್ಲಿ ನಿಂತು ಗಿರಾಕಿಗಳನ್ನು ಸೆಳೆಯುವ ‘ಕೃತಕ ಮೀಸೆ’ಯ ಮಾವ, naughty ವೈದ್ಯ, ಟೀವಿ ಬೀರುವ ಬಣ್ಣದ ಬೆಳಕಿಗೆ ಕಣ್ಣಿಟ್ಟು ಕೂತ ನಾಯಿಮರಿ, ದಾರಯುಕ್ತ ಸೂಜಿ, ಹೇರ್ಪಿನ್ಗಳೊಂದಿಗೆ ನೇತಾಡುವ ಕ್ಯಾಲೆಂಡರ್ ಹಾಳೆ, ಸರ್ವ ಋತು ಬಂದರು (ಬಂದರ್!) ಆಗಿರುವ ಮನುಷ್ಯ, ಬೆಂಗಳೂರಲ್ಲಿ ಸಾಹಿತ್ಯದ ನೆಪದಲ್ಲಿ ಗಂಟುಬೀಳುವ ‘ಗ್ಲಾಸು’ ಮೇಟುಗಳು, ಲೋಕದ ಕಣ್ಣಿಗೆ ಹುಚ್ಚರಂತೆ ತೋರುವ ಮೇಧಾವಿ ಮಾಸ್ತರು, ಜಾಣ ಭಕ್ತರ ಹುನ್ನಾರಕ್ಕೆ ಮತ್ತೆ ಮತ್ತೆ ಮೋಸ ಹೋಗುವ ದೇವರು, ಪೇಪರು ಓದಿಸಿ ಕೇಳುವ ಕಣ್ಣು ಮಂಜಾದ ಮುದುಕರು, ..ಇಂಥ ನೂರಾರು ಚುರುಕಾದ ನಿತ್ಯ ಸೂಕ್ಷ್ಮಗಳಿಂದ ತುಂಬಿರುವ ಈ ಲಲಿತ ಪ್ರಬಂಧಗಳ ಹಿಂದೆ ಒಂದು ಬಲಿತ ಮನಸ್ಸಿನ ಜತೆಗೆ ಕವಿಯ ಕಣ್ಣೂ ಇದೆ. ಈ ಕಣ್ಣಿಗೆ ಟೀವಿ - ಗರ್ದಿಗಮ್ಮತ್ತಿನ ಪೆಟ್ಟಿಗೆಯಂತೆ, ಮೊಬೈಲು - ‘ಸುಂಡಿಲಿ’ಯಂತೆ, ಶಾಸನಸಭೆಯ ಕೆಲ ಎಂ.ಎಲ್.ಎ.ಗಳು ‘ಕೇಸರಿಬಾತ್’ನಂತೆ ಕಾಣುತ್ತವೆ.
ಇಂದಿನ ಬಹುತೇಕ ಬರವಣಿಗೆ ಎದುರಿನ ಮನುಷ್ಯನಲ್ಲಿ ಆಸಕ್ತಿ ಕಳೆದುಕೊಂಡು, ಬರೆ ಮಾಹಿತಿ ಕಲೆ ಹಾಕುವುದರಲ್ಲಿ ಗರ್ಕಾಗಿರುವಾಗ, ಈರಪ್ಪ ಕಂಬಳಿಯವರ ಈ ಪ್ರಬಂಧಗಳ ಮಾನವೀಯ ಕಳಕಳಿ, ಪೂರ್ವಗ್ರಹಗಳಿಲ್ಲದ ಜೀವನಾನುರಾಗ ಮನಮುಟ್ಟುವಂತಿವೆ.