Product Description
ಉತ್ತಮ ಪ್ರತಿಭೆಯಿದ್ದೂ ಸೃಷ್ಟಿ ಕಾರ್ಯಕ್ಕೆ ತೊಡಗದೆ, ಯಾವ ಕಷ್ಟ ನಿಷ್ಠುರಗಳಿಗೂ ಪಾತ್ರನಾಗಲು ಹೆದರದೆ ಮೌಲ್ಯನಿಷ್ಠ ಕೃತಿ ವಿಮರ್ಶೆಗೆ ತೊಡಗಬೇಕಾದರೆ ಅಸಾಧಾರಣ ಧೈರ್ಯ ಅಗತ್ಯ. ಹಾಗೆಂದು ಇದು ಕೇವಲ ಧೈರ್ಯದ ಪ್ರಶ್ನೆ ಅಷ್ಟೇ ಅಲ್ಲ. ಆಳವಾದ ನಿರಂತರವಾದ ಅಭ್ಯಾಸ, ಚಿಂತನ, ಅದ್ಭುತವಾದ ತಾಳ್ಮೆ ಇವು ಪಾಂಡಿತ್ಯಕ್ಕೆ ಬೇಕಾದ ಮುಖ್ಯ ಗುಣಗಳು. ಅಂಥ ಪಾಂಡಿತ್ಯವಿಲ್ಲದೆ ವಿಮರ್ಶೆ ಸಾರ್ಥಕವಾಗದು. ಆದರೆ ಈ ಪಾಂಡಿತ್ಯವಷ್ಟೇ ವಿಮರ್ಶೆಗೆ ಸಾಲದು. ಅದರ ಜೊತೆಗೇ ಸಾಹಿತ್ಯ ಕೃತಿಗಳಿಂದ ಪ್ರಭಾವಿತನಾಗಲು ಅವುಗಳ ಪ್ರಬಂಧ ಧ್ವನಿಯನ್ನೂ, ಅಂಗಾಂಗ ಸಾಂಗತ್ಯವನ್ನೂ ಗ್ರಹಿಸಲು ಸಮರ್ಥವಾದ ಸಹೃದಯ ಪ್ರತಿಭೆಯೂ ಸೂಕ್ಷ್ಮ ಸಂವೇದನ ಸಾಮರ್ಥ್ಯವೂ ಸೇರಿದಾಗ ಈ ಅಪೂರ್ವ ಯೋಗವೇ ನಿಜವಾದ ವಿಮರ್ಶಕನ ಉದಯಕ್ಕೆ ಕಾರಣವಾಗಬಹುದು. ಈ ಬಗೆಯ ಯೋಗ ಶ್ರೀ ಜಿ.ಎಚ್. ನಾಯಕರಲ್ಲಿ ಇದೆ ಎನ್ನುವುದನ್ನು ಈ ಲೇಖನಗಳು ಸಿದ್ಧಪಡಿಸುತ್ತವೆ.