Product Description
ಈ ಕೃತಿಯ ವೈಶಿಷ್ಟ್ಯಗಳ ಬಗ್ಗೆ ಹೇಳುತ್ತೀರಾ?
ವಿಜ್ಞಾನ-ತಂತ್ರಜ್ಞಾನದ ಹದಿನಾಲ್ಕು ಶಾಖೆಗಳ ಬಗ್ಗೆ ಒಂದೇ ಪುಸ್ತಕದಲ್ಲಿ ಬರಹಗಳಿರುವುದೇ ಒಂದು ವೈಶಿಷ್ಟ್ಯ. ಇದರ ಜೊತೆಗೆ ಈ ಸಂಪುಟದಲ್ಲಿ ಇನ್ನೂ ಕೆಲವು ವಿಶೇಷ ಸೇರ್ಪಡೆಗಳಿವೆ. ಸಾಮಾನ್ಯವಾಗಿ ವೈದ್ಯಕೀಯ ಕ್ಷೇತ್ರದ ಬಗ್ಗೆ ಹೇಳುವಾಗ ಹಲವು ಸಂದರ್ಭಗಳಲ್ಲಿ ಔಷಧಿವಿಜ್ಞಾನ ಕಣ್ಣು ತಪ್ಪಿಸುತ್ತದೆ. ಆದರೆ ಈ ಪುಸ್ತಕದಲ್ಲಿ ಹಾಗಾಗಿಲ್ಲ. ಅದೇ ರೀತಿ ವಿಧಿವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಕುರಿತ ಲೇಖನವೂ ಇದೆ. ಈ ವಿಜ್ಞಾನ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದರ ಅರಿವು ಈ ಮೂಲಕ ಸಾಮಾನ್ಯ ಓದುಗರಿಗೂ ಮೊದಲ ಬಾರಿಗೆ ಲಭ್ಯವಾಗುತ್ತಿದೆ. ವಿಜ್ಞಾನವು ಪ್ರತಿಬಾರಿಯೂ ಸಮಾಜಮುಖಿಯಾಗಿಲ್ಲ. ಮೊದಲನೇ ಮಹಾಯುದ್ಧದಲ್ಲಿ ವಿಷಾನಿಲಗಳ ಪ್ರಯೋಗವಾಯಿತು, ಎರಡನೇ ಮಹಾ ಯುದ್ಧದಲ್ಲಿ ಮನುಕುಲಕ್ಕೆ ಕಳಂಕ ಎನ್ನುವಂತೆ ಜಪಾನಿನ ಎರಡು ನಗರಗಳ ಮೇಲೆ ಬಾಂಬ್ ದಾಳಿಯಾಯಿತು. ವಿಜ್ಞಾನದ ದುರುಪಯೋಗ ಹೇಗಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಇದರ ಜೊತೆಗೆ ಪ್ರಗತಿಯ ಹೆಸರಿನಲ್ಲಿ ನಮ್ಮ ಇಡೀ ಪರಿಸರಕ್ಕೇ ಧಕ್ಕೆ ತಂದು ನಾವೂ ಸೇರಿದಂತೆ ಜೀವಿ ಸಂಕುಲಗಳ ಉಳಿವಿಗಾಗಿ ಹೋರಾಟಮಾಡಬೇಕಾದ ಸ್ಥಿತಿ ಎದುರಾಗಿದೆ. ಆ ಕುರಿತು ಎಚ್ಚರಿಕೆ ನೀಡುವ ಲೇಖನಗಳೂ ಈ ಸಂಪುಟದಲ್ಲಿವೆ.
ಇದಲ್ಲದೆ ವಿಜ್ಞಾನದ ಅನ್ವಯದಿಂದಲೇ ಮೂಡಿಬಂದ ತಂತ್ರಜ್ಞಾನ ಕುರಿತು ಹಲವು ಅಧ್ಯಾಯಗಳನ್ನು ಈ ಸಂಪುಟದಲ್ಲಿ ಸೇರಿಸಿದೆ. ಇಲ್ಲೂ ಕೂಡ ಅವು ಪಡೆದ ತಿರುವುಗಳನ್ನು ಗುರುತಿಸುವ ಪ್ರಯತ್ನವಿದೆ. ರೋಬಾಟ್ಸ್ ಬಳಕೆಯಿಲ್ಲದೆ ಮಂಗಳಗ್ರಹದ ಶೋಧ ಸಾಧ್ಯವಿಲ್ಲ. ವಿಜ್ಞಾನದ ತಿರುವುಗಳ ಕಥೆಯ ಓದು ಸುಲಭವಾಗಬೇಕು ಎಂಬ ಕಾರಣಕ್ಕಾಗಿ ಈ ಸಂಪುಟದಲ್ಲಿ ತಾಂತ್ರಿಕ ಪದಗಳ ಬಳಕೆ ಬಂದಾಗ ಆವರಣದಲ್ಲಿ ಅದಕ್ಕೆ ಸಂವಾದಿಯಾದ ಇಂಗ್ಲಿಷ್ ಪದಗಳನ್ನು ಕೊಟ್ಟಿದೆ. ಪರಿಕಲ್ಪನೆಗಳನ್ನು ಸರಳವಾಗಿ ಹೇಳಲು ಪ್ರಯತ್ನಿಸಿದೆ.
ಒಟ್ಟು ಇಪ್ಪತ್ತೈದು ಮಂದಿ ಲೇಖಕರು ಈ ಪುಸ್ತಕ ರಚನೆಯ ಕೆಲಸದಲ್ಲಿ ನಿಮ್ಮೊಡನೆ ಕೈಜೋಡಿಸಿದ್ದಾರೆ. ಇಷ್ಟು ದೊಡ್ಡ ತಂಡದೊಡನೆ ಕೆಲಸಮಾಡಿದ ಅನುಭವ ಹೇಗಿತ್ತು?
ಕನ್ನಡದಲ್ಲಿ ಪ್ರಬುದ್ಧ ವಿಜ್ಞಾನ ಬರಹಗಾರರ ಪಡೆಯೇ ಇದೆ. ಆಯಾ ವಿಜ್ಞಾನ ವಿಭಾಗದಲ್ಲಿ ಬೋಧಿಸಿದವರ, ಸಂಶೋಧನೆ ಮಾಡಿದವರ, ಲೇಖಕರಾಗಿ ಬರೆದವರ ಪಟ್ಟಿ ದೊಡ್ಡದು. ಹೀಗಾಗಿ ಈ ಪುಸ್ತಕಕ್ಕಾಗಿ ತಜ್ಞ ಲೇಖಕರನ್ನು ಸಂಪರ್ಕಿಸಿದಾಗ ಅದರಲ್ಲಿ ವಿಜ್ಞಾನದ ಪ್ರಮುಖ ಕ್ಷೇತ್ರಗಳಾದ ಭೌತವಿಜ್ಞಾನ, ಖಭೌತವಿಜ್ಞಾನ, ಅಂತರಿಕ್ಷವಿಜ್ಞಾನ, ರಸಾಯನವಿಜ್ಞಾನ, ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ವೈದ್ಯವಿಜ್ಞಾನ, ಔಷಧಿವಿಜ್ಞಾನ, ವಿಧಿವಿಜ್ಞಾನ, ಕೃಷಿವಿಜ್ಞಾನ, ಭೂವಿಜ್ಞಾನ, ಪರಿಸರವಿಜ್ಞಾನ, ಗಣಿತ, ಎಂಜಿನಿಯರಿಂಗ್, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ-ಇಲ್ಲಿನ ಚಾರಿತ್ರಿಕ ಬೆಳವಣಿಗೆಗಳು ಮತ್ತು ಬದಲಾದ ಮಾರ್ಗಗಳನ್ನು ಕುರಿತು ಬರೆಯಲು ಅವರೆಲ್ಲ ಅತ್ಯಂತ ಪ್ರೀತಿಯಿಂದ ತೊಡಗಿಕೊಂಡರು. ಪ್ರತಿಯೊಬ್ಬರಲ್ಲೂ ಬರೆಯುವ ಉತ್ಸಾಹವಿತ್ತು. ಅವರೆಲ್ಲರ ಜೊತೆಯಲ್ಲಿ ಕೆಲಸಮಾಡಿದ ಅನುಭವ ನಿಜಕ್ಕೂ ಚೆನ್ನಾಗಿತ್ತು.
ಇಷ್ಟೆಲ್ಲ ದೊಡ್ಡ ಪುಸ್ತಕ ಎಂದಮೇಲೆ ಅದರ ಪ್ರಕಟಣೆಯೂ ಸಾಕಷ್ಟು ದೊಡ್ಡ ಕೆಲಸವೇ ಆಗಬಹುದು ಅಲ್ಲವೇ?
ಹೌದು. ವಿಷಯದ ವ್ಯಾಪ್ತಿ ಹೆಚ್ಚಿರುವುದರಿಂದ ಪುಟಗಳ ಸಂಖ್ಯೆ ಹೆಚ್ಚು. ವಿಜ್ಞಾನದ ಪುಸ್ತಕವಾದ್ದರಿಂದ ಬಣ್ಣದ ಚಿತ್ರಗಳು ಬೇಕು. ಬಣ್ಣದ ಚಿತ್ರ ಎಂದಮೇಲೆ ಕಾಗದದ ಗುಣಮಟ್ಟ, ಪುಸ್ತಕದ ಒಟ್ಟಾರೆ ವಿನ್ಯಾಸಗಳೂ ಚೆನ್ನಾಗಿರಬೇಕು. ಇವೆಲ್ಲದರ ಹಿನ್ನೆಲೆಯಲ್ಲಿ ‘ವಿಜ್ಞಾನದ ಹೆದ್ದಾರಿಯಲ್ಲಿ ಮಹಾ ತಿರುವುಗಳು’ ಪುಸ್ತಕವನ್ನು ಯಾರು ಪ್ರಕಟಿಸುತ್ತಾರೆ ಎಂಬ ಪ್ರಶ್ನೆ ಏಳಬೇಕಾಗಿತ್ತು. ಆದರೆ ಹೆಸರಾಂತ ನವಕರ್ನಾಟಕ ಪ್ರಕಾಶನ ಸಂಸ್ಥೆ ಜೊತೆ ನನಗೆ ಹೆಚ್ಚು ಕಡಿಮೆ 25 ವರ್ಷಗಳ ಆತ್ಮೀಯ ಸಂಬಂಧವಿದ್ದುದರಿಂದ ಆ ಪ್ರಶ್ನೆ ಏಳಲಿಲ್ಲ. ನವಕರ್ನಾಟಕ ಪ್ರಕಾಶನ ಸಂಸ್ಥೆ ಮೊದಲಿನಿಂದಲೂ ಬೇರೆ ಬೇರೆ ಹಂತಕ್ಕೆ ಬೇಕಾದ ವಿಜ್ಞಾನ ಕೃತಿಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಕಟಿಸಿದೆ. ಈ ಸಂಸ್ಥೆಯೊಂದೇ ಸುಮಾರು 1,500 ವಿಜ್ಞಾನ ಕೃತಿಗಳನ್ನು ಪ್ರಕಟಿಸಿದೆ. ವಿಜ್ಞಾನ ಪ್ರಕಾಶನಕ್ಕೆ ಇಷ್ಟೊಂದು ಮಹತ್ವ ಕೊಟ್ಟ ಬೇರೆ ಪ್ರಕಾಶನ ಸಂಸ್ಥೆಗಳು ವಿರಳ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀ ಆರ್.ಎಸ್. ರಾಜಾರಾಮ್ ಮತ್ತು ಪ್ರಧಾನ ವ್ಯವಸ್ಥಾಪಕರಾಗಿದ್ದ ಶ್ರೀ ಎ. ರಮೇಶ ಉಡುಪ ಅವರ ಬಳಿ ಈ ವಿಷಯ ಪ್ರಸ್ತಾಪಿಸಿದಾಗ, ಕ್ಷಣವೂ ಯೋಚಿಸದೆ ‘ಆಗಬಹುದು’ ಎಂದರು. ಈಗಿನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ. ಸಿದ್ಧನಗೌಡ ಪಾಟೀಲರೂ ಇಂಥ ಕೃತಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಧಾತು ಸೇರ್ಪಡೆಯಾಗುತ್ತದೆ ಎಂದು ಬೆಂಬಲಿಸಿದ್ದಾರೆ. ಯೋಜನೆಯಿಂದ ಮುದ್ರಣದವರೆಗೆ ಪ್ರತಿ ಹಂತದಲ್ಲೂ ನವಕರ್ನಾಟಕದ ಮಿತ್ರರು ಅಪಾರ ಆಸಕ್ತಿಯಿಂದ ಕೆಲಸಮಾಡಿದ್ದಾರೆ. ಪುಸ್ತಕ ಈ ಗುಣಮಟ್ಟದಲ್ಲಿ ಹೊರಬಂದಿರುವುದರ ಹಿನ್ನೆಲೆಯಲ್ಲಿ ಈ ಆಸಕ್ತಿಯ ಪ್ರಭಾವ ಬಹಳ ದೊಡ್ಡದು.