Product Description
ಜಿಮ್ ಕಾರ್ಬೆಟ್ ಮೂಲತಃ ಒಬ್ಬ ಬೇಟೆಗಾರ. ಬೇಟೆಯನ್ನು ಒಂದು ಆಧ್ಯಾತ್ಮಿಕ ಎತ್ತರಕ್ಕೆ ತೆಗೆದುಕೊಂಡು ಹೋದ ಸಾಧಕ. ಕಾರ್ಬೆಟ್ ತನ್ನ ಪ್ರತಿಯೊಂದು ಶಿಕಾರಿಯನ್ನೂ ಕಾಡಿನ ವಿಶಿಷ್ಟ ಗುಣ ಲಕ್ಷಣಗಳನ್ನು ಶೋಧಿಸುವ ಅನ್ವೇಷಣೆಯಾಗಿ ಪರಿಭಾವಿಸುವುದರಿಂದ ಈ ಕಥನಗಳು ಅನೂಹ್ಯವಾದ ಲೋಕಗಳನ್ನು ಧುತ್ತನೆ ನಮ್ಮೆದುರಿಗೆ ತೆರೆದು ತೋರುತ್ತವೆ.
ಕನ್ನಡದಲ್ಲಿ ಶಿಕಾರಿ ಸಾಹಿತ್ಯವನ್ನು ಬರೆದವರು ಅತ್ಯಂತ ವಿರಳ. ಕೆದಂಬಾಡಿ ಜತ್ತಪ್ಪ ರೈ, ಬಡ್ಡಕ್ಕ ಅಯ್ಯಪ್ಪ ಗೌಡ, ಕಾಕೆಮಾನಿ ಮುಂತಾದವರ ಹೆಸರುಗಳು ನೆನಪಿಗೆ ಬರುತ್ತವೆ. ಕುವೆಂಪು, ತೇಜಸ್ವಿ ಅವರುಗಳ ಕಥನ ಸಾಹಿತ್ಯದಲ್ಲಿಯೂ ಶಿಕಾರಿಯ ವಿವರಗಳು ಅಪೂರ್ವವಾಗಿ ದಾಖಲಾಗಿವೆ. ಇಂಥಾ ಸಂದರ್ಭದಲ್ಲಿ ‘ಕಾರ್ಬೆಟ್ ಕಥನ’ಗಳು ವಿವೇಕಾನಂದರ ಸಹಜ ಪರಿಸರ ಪ್ರಜ್ಞೆಯ ಮೂಲಕ ಕನ್ನಡ ಕಥಾನಕಗಳಾಗಿ ಪ್ರಕಟಗೊಳ್ಳುತ್ತಿವೆ.