Product Description
ರಾಜ್ಕುಮಾರ್ ಬಹಳ ಸಿಂಪಲ್ ಬಿಡ್ರೀ.. ಬಿಳೀ ಪಂಚೆ, ಷರಟು ಮಾತ್ರ ಧರಿಸೋರು’. ರಾಜ್ಕುಮಾರ್ ಅವರ ಬಗ್ಗೆ ಬಂದಾಗೆಲ್ಲ ಈ ಮಾತು ಬರೋದು. ದಶಕಗಳ ಕಾಲ ಅದು ಹೇಗೆ ಬರೀ ಪಂಚೆ, ಷರಟು ಧರಿಸುತ್ತಾರೆ. ಪ್ಯಾಂಟು ಏಕೆ ಹಾಕಲಿಲ್ಲ, ಬರೀ ಪಂಚೆ, ಷರಟು ಹಾಕಿದರೆ ಮಾತ್ರ ಸಿಂಪಲ್ಲಾ? ಅದರೊಳಗೆ ಸೇರೋ ದೇಹಕ್ಕೊಂದು ವ್ಯಕ್ತಿತ್ವ ಮುಖ್ಯ ಅಲ್ವಾ? ಅದು ಹೇಗಿತ್ತು ಅನ್ನೋ ಪ್ರಶ್ನೆಗೆ ಮತ್ತದೆ ಪಂಚೆ ಷರಟುಗಳ ಉತ್ತರವೇ ಬರುತ್ತಿತ್ತು. ಹುಟ್ಟೂರು, ಓಡಾಡಿದ ಜಾಗ ಗುರುತು ಮಾಡಿ, ಅವರಿಟ್ಟ ಹೆಜ್ಜೆ ಗುರುತುಗಳ ಮೇಲೆ ಮತ್ತೆ ಮತ್ತೆ ನಮ್ಮ ಹೆಜ್ಜೆ ಊರುತ್ತಾ, ಉರುಳು ಸೇವೆ ಮಾಡುತ್ತಿದ್ದ ನಂಜನಗೂಡಲ್ಲಿ ಅಲೆದಾಡುತ್ತಾ, ಇಷ್ಟಪಟ್ಟು ತಿನ್ನುತ್ತಿದ್ದ ಹೋಟೆಲ್ಗಳೆಲ್ಲಾ ಹುಡುಕಾಡುತ್ತಿದ್ದಾಗ ಅರ್ಥವಾಗಿದ್ದು ಏನೆಂದರೆ, ರಾಜ್ಕುಮಾರ್ ಸಿಂಪಲ್ನ ಸೂತ್ರಧಾರ ಮತ್ಯಾರು ಅಲ್ಲ, ಕೊನೇತನಕ ಅವರೊಳಗಿದ್ದ ಮುತ್ತುರಾಜನೇ ಅನ್ನೋದು.
ನಾನಾಗಲಿ, ನೀವಾಗಲಿ, ಯಾವ ನಟರೇ ಆಗಲಿ, ವೃತ್ತಿ ಜೀವನಕ್ಕೆ ಕಾಲಿಡುವ ಆರಂಭದಲ್ಲಿ ಅವರೊಳಗಿರುವ ಮುಗ್ಧತೆ, ಆ ವ್ಯಕ್ತಿತ್ವ ಆಮೇಲಾಮೇಲೆ ಅವರಲ್ಲಿ ಇರೋದಿಲ್ಲ. ಅದರಲ್ಲೂ, ಹೆಸರು, ಹಣ ದಕ್ಕಿದಾಗಲಂತೂ ತನ್ನೊಳಗೆ ಮೂಲ ವಿಗ್ರಹದ ಥರ ಇರೋ ಮುಗ್ಧತೆ ಕಾಣೆಯಾಗಿಬಿಡುತ್ತದೆ. ರಾಜ್ಕುಮಾರರು ಇದಕ್ಕೆ ಅಪವಾದ. ಸಿನಿಮಾದಲ್ಲಿ ಪಾರ್ಟ್ ಕೇಳಿಕೊಂಡು ಅಪ್ಪನ ಜೊತೆ ಮದರಾಸಿಗೆ ಹೋದಾಗ ಇದ್ದ ಮುಗ್ಧತೆ, ರಾಜ್ಕುಮಾರನಾಗಿ, ಹೆಸರು, ಹಣ, ಜನಪ್ರಿಯತೆ ಎಲ್ಲ ಗಳಿಸಿದ ಮೇಲೂ ಆಂತರ್ಯದಲ್ಲಿ ಹಾಗೇ ಬದುಕಿತ್ತು. ನಮಗೆಲ್ಲಾ ಸಿಂಪಲ್ ಆಗಿ ಕಾಣ್ತಾ ಇದ್ದದ್ದು ರಾಜ್ಕುಮಾರರಾದರೂ ಅದಕ್ಕೆ ಕಾರಣೀಭೂತರು ಈ ಮುತ್ತುರಾಜ್. ಸಿಂಪಲ್ಗೆ ಸ್ಯಾಂಪಲ್ ಆಗಿರೋ ಅವರನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದೇವೆ..