Product Description
‘ಕಥೆಯ ವಸ್ತು ಮತ್ತು ಮೌಲ್ಯಗಳನ್ನು ಓದುಗನಿಗೆ ಮುಟ್ಟಿಸುವುದೇ ಯಾವುದೇ ಕಥೆಯ ಪ್ರಮುಖ ಉದ್ದೇಶ’ ಎಂಬ ನಂಬಿಕೆಯನ್ನಿಟ್ಟುಕೊಂಡು ಅದನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿರುವವರು ಗಣೇಶಯ್ಯನವರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸಮಾರ್ಗವನ್ನು ತೆರೆದ ಮಾರ್ಗ ಪ್ರವರ್ತಕರಿವರು.
ಮಿಹಿರಾಕುಲ ಕಥಾ ಸಂಕಲನ ವೈವಿಧ್ಯಮಯ ಕಥಾವಸ್ತುಗಳನ್ನು ಹೊಂದಿರುವ ಕೃತಿ. ಹೂಣರ ರಾಜನೊಬ್ಬ ಕಾಶ್ಮೀರದಲ್ಲಿ ಶಿವಾಲಯ ನಿರ್ಮಿಸಿದ ಕತೆ, ಟ್ರಾವರ್ನಿಯರ್ ಎಂಬ ಫ್ರೆಂಚ್ ಯಾತ್ರಿಕ ದಕ್ಷಿಣ ಭಾರತದಿಂದ ವಜ್ರವನ್ನು ಹೊತ್ತೊಯ್ದ ಕತೆ, ಅಕ್ಬರನನ್ನು ಅನಾರ್ಕಲಿ ಸಂದಿಗ್ಧತೆಗೆ ಸಿಲುಕಿಸಿದ ಕತೆ ಹೀಗೆ ಮೂರು ಕತೆಗಳು ಚರಿತ್ರೆಯ ವಿಭಿನ್ನ ಕಥಾವಸ್ತುವನ್ನು ಹೊಂದಿದ್ದರೆ, ‘ಆದಿನೆಲೆ’ ಕತೆ ಚರ್ಚೆಗೊಳಗಾಗಬೇಕಾದ ಪ್ರಸ್ತುತ ಸನ್ನಿವೇಶವನ್ನು ಕುರಿತದ್ದು.
ಎಂದಿನಂತೆ ಈ ಕತೆಗಳಲ್ಲಿ ಗಣೇಶಯ್ಯನವರ ವಿಶಿಷ್ಟ ಛಾಪಿದೆ. ಅವರ ಸಂಶೋಧನಾ ದೃಷ್ಟಿ, ಕುತೂಹಲಕರ ಶೈಲಿ, ಭರಪೂರ ಮಾಹಿತಿ ಎಲ್ಲವೂ ಸೇರಿದೆ.