Product Description
ಕರ್ನಾಟಕವನ್ನು ಅರಿಯುವುದು ಹೇಗೆ? ಅದಕ್ಕೆ ಒದಗುವ ಸಹಾಯಕ ಸಾಹಿತ್ಯ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸುಲಭವಲ್ಲ. ಪ್ರತಿಯೊಬ್ಬ ಕನ್ನಡಿಗನೂ ವಿದ್ವಾಂಸನಾಗಿ, ಸಂಶೋಧಕನಾಗಿ ಇರಲು ಸಾಧ್ಯವಿಲ್ಲ. ಹೆಬ್ಬೊತ್ತಿಗೆಗಳನ್ನು ಓದಿ ವಿಷಯಗಳನ್ನು ಸಂಗ್ರಹಿಸುವುದೂ ಸಾಧ್ಯವಿಲ್ಲ. ಪ್ರೌಢಶಾಲೆಯ ಶಿಕ್ಷಣವನ್ನೊ, ಪದವಿಪೂರ್ವ ತರಗತಿಗಲ ಓದನ್ನೊ ಪಡೆದಿರುವ ಕನ್ನಡಿಗನಿಗೆ ತನ್ನನ್ನು ತನ್ನ ಪರಂಪರೆಯನ್ನು ಅರಿತುಕೊಳ್ಳಲು ಇರುವ ಸಾಧನ ಸಂಪತ್ತು ಯಾವಾಗಲೂ ವಿರಳವಾದದ್ದೆ. ಅಂಥ ಸಂಪತ್ತು ಅಧಿಕೃತವೆನ್ನಿಸಿರುವುದು ಇನ್ನೂ ವಿರಳ. ಈ ದಿಸೆಯಲ್ಲಿ ಪ್ರಕಟಗೊಂಡಿರುವ ಒಂದು ಪುಸ್ತಕ ‘ನಮ್ಮ ನಾಡು ಕರ್ನಾಟಕ’.
ಕರ್ನಾಟಕದ ಪರಂಪರೆ ಎಷ್ಟು ವಿಸ್ತಾರವಾದದ್ದು, ಶ್ರೀಮಂತವಾದದ್ದು ಎಂದರೆ ಅದನ್ನೆಲ್ಲ ಒಂದು ಕೈಪಿಡಿಯನ್ನಾಗಿ ಭಟ್ಟಿ ಇಳಿಸುವುದು ಸುಲಭವಾದ ಕೆಲಸವಲ್ಲ. ಆ ಕೆಲಸಕ್ಕೆ ಕೈ ಹಾಕುವವರಿಗೆಲ್ಲ ಎದುರಾಗುವ ದೊಡ್ಡ ಸಮಸ್ಯೆಯೆಂದರೆ, ಯಾವುದನ್ನು ಬಿಡುವುದು, ಯಾವುದನ್ನು ಹಿಡಿಯುವುದು ಎಂಬ ಆಯ್ಕೆಯದು. ಪರಂಪರೆಯನ್ನು ಪ್ರತಿನಿಧಿಸುವ ಎಲ್ಲ ಮುಖಗಳನ್ನೂ ಚೆನ್ನಾಗಿ ಅರಿತವರು ಮಾತ್ರವೇ ಈ ಕೆಲಸವನ್ನು ಮಾಡಬಲ್ಲರು. ನಮ್ಮ ನಾಡಿನ ಬಗೆಗೆ ಸೂಕ್ತ ತಿಳುವಳಿಕೆ ಕೊಡಬಲ್ಲ ಒಂದು ಪುಸ್ತಕವನ್ನು ರಚಿಸಿರುವ ಡಾ|| ಎಚ್.ಎಸ್. ಗೋಪಾಲ ರಾಯರು ಈ ಪರೀಕ್ಷೆಯನ್ನು ಯಶಸ್ವಿಯಾಗಿ ದಾಟಿದ್ದಾರೆ. ‘ನಮ್ಮ ನಾಡು ಕರ್ನಾಟಕ’ ಎಂಬ ವರ ಈ ಪುಸ್ತಕ ಕರ್ನಾಟಕದ ಶ್ರೀಮಂತ ಪರಂಪರೆಯನ್ನು ತಕ್ಕಷ್ಟು ಚಿಕ್ಕ ವ್ಯಾಪ್ತಿಯಲ್ಲಿ ತುಂಬ ಸಮರ್ಪಕವಾಗಿ ನಿರೂಪಿಸುತ್ತದೆ.