Quantity
Product Description
Poetry Collection of Shantaram Shetty
*ನವಿರಾದ ಹಾಸ್ಯ ಪ್ರಜ್ಞೆಯ ಪುಟ್ಟ ವಜ್ರ ಸಂಪುಟ*
ಡಾ|| ದೊಡ್ಡರಂಗೇಗೌಡ
ಜಗತ್ತಿನಲ್ಲಿ ಎಷ್ಟೆಷ್ಟೋ ಕವಿಗಳು ಕಾವ್ಯ ರಚಿಸಿದ್ದಾರೆ.ಎಣಿಸಲು ಹೋದರೆ ಅಗಣಿತ...ಹೀಗಿದ್ದರೂ ಇನ್ನೂ ಹುಟ್ಟುತ್ತಲೇ ಇದ್ದಾರೆ ಕವಿಗಳು. ಕಟ್ಟುತ್ತಲೇ ಇದ್ದಾರೆ ಹೊಸ ಹೊಸ ಕವಿತೆಗಳನ್ನು! ಮುಗಿದಿಲ್ಲವಿನ್ನೂ ಜಗದೆಲ್ಲ ಭಾವ ಸರಕಿನ ಬೃಹತ್ ಭಂಡಾರ!
ಕಾವ್ಯ ಆಕರ್ಷಕವಾಗಿ ಕಾಣುವುದೇ ಮಾತಿನಲ್ಲಿ.. ಕವಿಯ ಕಲಾತ್ಮಕ ಹೆಣಿಗೆಯಲ್ಲಿ...ಅನುಭವದ ಒಕ್ಕಣೆಯಲ್ಲಿ...ಲಟ್ಟನಿಗೆಯಿಂದ ಚಪಾತಿ ಹೊಸೆದಂತಲ್ಲ ಕಾವ್ಯ ಸೃಜಿಸುವುದು. ಅದೊಂದು ವಿಸ್ಮಯ ಅವತರಣ! ನುಡಿ ನುಡಿಯ ನಡೆಯಲ್ಲಿ ಚಿತ್ತಾರದ ಕೋರೈಸುವ ಕಾಂತಿ..ವಾಗಾರ್ಥದಾಚೆ ಮಿಂಚಿ ಮಿನುಗುವ ಆಕರ್ಷಣ.
ಈ ಪ್ರಪಂಚದಲ್ಲಿಎಶಃಟು ಕವಿಗಳಿದ್ದಾರೋ ಅಷ್ಟು ರೀತಿ ಶೈಲಿಗಳಿರಲಿಕ್ಕೆ ಸಾಧ್ಯ. ಒಬ್ಬರ ಹಾಗೆ ಮತ್ತೊಬ್ಬರಿಲ್ಲ..ಒಂದು ಕಾವ್ಯದ ಹಾಗೆ ಮತ್ತೊಂದಿಲ್ಲ. . .ಅಂಥ ವಿಭಿನ್ನತೆಯಿಂದ ಸ್ವಂತಿಕೆಯಿಂದ ನುಡಿಗಟ್ಟಿನ ಬಳಕೆಯ ಸೃಜನಶೀಲತೆಯಿಂದ ಕಾವ್ಯಕ್ಕೆ ಮೌಲ್ಯ ಪ್ರಾಪ್ತವಾಗುತ್ತದೆ.
ನಾನು ಎಷ್ಟೋ ಕವಿಗಳ ಕಾವ್ಯ ಓದಿಕೊಂಡೇ ಈ ಆರು ದಶಕಗಳ ದೂರದ ಹಾದಿ ನಡೆದಿದ್ದೇನೆ.ಇಷ್ಟಾದರೂ ಈಗ ಕವಿ ಶಾಂತಾರಾಮ್ ಎ. ಶೆಟ್ಟಿ ಅವರ ಪುಟ್ಟ ಪುಟ್ಟ ಕವಿತೆಗಳನ್ನು ಓದುವಾಗ ನನಗೆ ಆಶ್ಚರ್ಯವಾಗಿದೆ ಅದೇ ಕವಿಯ ವಿನೂತನ ಶೈಲಿ. ಯಾರ್ಯಾರೋ ಇಲ್ಲಿನ ಇದೇ ವಸ್ತುಗಳನ್ನು ಕುರಿತು ಈ ಹಿಂದೆ ಏನೇನೋ ಹೇಳಿರಬಹುದು. ಆದರೆ ಕವಿ ಶಾಂತಾರಾಮ್ ಹಾಗೆ ಹೇಳಿಲ್ಲ...ಅದೇ ವಿಸ್ಮಯ . ಕಾವ್ಯದ ನಿಜವಾದ ಅಸ್ಮಿತೆಯೇ ಅದು.ಮಾತಿನ ರೀತಿ , ಪದಪದಗಳಲ್ಲಿನ ವಿನೂತನ ಅಲಂಕರಣ, ಬೇರೆಯವರಲ್ಲಿ ಕಾಣದ ಹಾಸ್ಯ ಪ್ರಜ್ಞೆ..ಶೈಲಿಯ ಮೊನಚು ನನಗೆ ಓದಲು ಕುತೂಹಲವನ್ನೂ ಹುಟ್ಟಿಸಿದೆ. ಉದಾ-ಅಮ್ಮಾವ್ರು ಪದ್ಯ ಓದಿ...
"ನಮ್ಮ ಮನೆಯಲ್ಲಿ ನನ್ನ ಮಾತಿನಂತೆಯೇ
ಎಲ್ಲಾ ನಡೆಯಬೇಕು,
ಆದರೂ ..ನನ್ನ ನಿರ್ಧಾರ ನಾಳೆ ಹೇಳ್ತೇನ
(ಹೆಂಡ್ತೀನ ಒಂದು ಮಾತು ಕೇಳ್ಬೇಕು!)
ಇಲ್ಲಿ ನವಿರಾದ ಹಾಸ್ಯವಿದೆ, ಒಳಗೊಳಗೆ ವ್ಯಂಗ್ಯವೂ ಇದೆ. ಮನೆಯ ಹೊರಗೆ ಗಂಡಸು ಹಮ್ಮೀರನಾದರೆ! ಮನೆಯ ಒಳಗೆ ಅಮ್ಮಾವ್ರದ್ದೇ ಕಾರುಭಾರು.ಗೃಹ ಮಂತ್ರಿಗಳು ಅವರೇ. ಗಂಡ ಕೇವಾ ರಬ್ಬರ್ ಸ್ಟಾಂಪ್. ಇದು ಇಲ್ಲಿನ ಚೋದ್ಯ . ಮನುಷ್ಯನ ಸಹಜ ಸ್ವಭಾವಗಳನ್ನು ಈ ಕವಿ ಅನಾವರಣ ಮಾಡುತ್ತಾರೆ.(ನಿದರ್ಶನ: ಗುಣಗಾನ). ಈ " ಸುಳ್ಳು ಹೇಳಿದ ಸತ್ಯ" ಸಂಕಲನ ನಿಜಕ್ಕೂ ವಿಕಟ ಕವಿಯ ವೈನೋದಿಕ ಕಾವ್ಯ. ಪ್ರತಿಯೊಂದರಲ್ಲೂ ಕವಿಯ ವಕ್ರ ದೃಷ್ಟಿ ಕಾಣುತ್ತದೆ, ಸಹೃದಯರದು ನೇರನೋಟ. ಆದರೆ ಕವಿಯದು ಇಲ್ಲಿ ವಾರೆನೋಟ!(ಚಿಂತೆ). ಇಂದಿನ ದಿನಮಾನಗಳಿಗೆ ಹರಿತವಾದ ವ್ಯಂಗ್ಯದ ಭಾಷ್ಯವನ್ನು ಬರೆಯುತ್ತಾರೆ ಹಾಸ್ಯ್ಕವಿ ಶಾಂತಾರಾಮ್ ವಿ. ಶೆಟ್ಟಿ. "ಜನ-ಜೀವನದಲ್ಲಿ " ವಿಡಂಬನೆಯ ಮೊನಚು ಇದೆ.ತಾಕತ್ತು..ಎಂಬಲ್ಲಿ ಗಂಡಿನ ದೈನೇಸಿ ಸ್ಥಿತಿಯ ಬಣ್ಣನೆಯೂ ಉಂಟು; ಇಲ್ಲಿನ ಪದ್ಯಗಳು ಕೆಲವು(ತಲಾಕು) ಮುಂತಾದವು ಗಾದೆ ಮಾತಿನಂತೆ ಮುತ್ತಾಗಿವೆ. ಕವಿಯ ಜೀವನ ಗ್ರಹಿಕೆಯ ಆಳದನುಭವದ ಒತ್ತಾಗಿವೆ."ನಗರ ಜೀವನ ,ತೃಣ ವಿಹೀನ" ಎನ್ನುತ್ತಾರೆ ಕವಿ.ಆದರೆ ಆಗಿರುವುದೇನು? ಕುಪ್ಪೆ ಕುಪ್ಪೆ ಕಸದ ಮಣ ಮಣದ ಗಲೀಜು ಹೂರಣ ! "ತಾಕತ್ತು" ಗ್ರಹಿಕೆಯ ಸೊಗಸಾಗಿದೆ.ಇಲ್ಲಿನ ದೊಡ್ಡ ಪದ್ಯಗಳು ಆಷ್ಟೇನೂ ಪ್ರಭಾವಿಯಾಗಿಲ್ಲ.ಆದರೆ ಗಿಡ್ಡ ಪದ್ಯಗಳು ನಿಜಕ್ಕೂ ನುಡಿಕಿಡಿಯ ಪಟಾಕಿಗಳಾಗಿವೆ.(ಸ್ಪರ್ಶ, ಕಟುಸತ್ಯ , ಸಿರಿತನ, ಪರಿಸ್ಥಿತಿ, ಅನ್ನಬ್ರಹ್ಮ.. .ಇತ್ಯಾದಿ)
ಅಪ್ಪನ ತ್ಯಾಗವನ್ನು ಹೇಳಿದ ಕವಿ ಮಗನ ಅಡ್ಡಹಾದಿ ಹವ್ಯಾಸವನ್ನೂ (ತೆವಲು) ಚೆನ್ನಾಗಿಯೇ ಹೇಳಿರುವುದು ಶಾಂತಾರಾಮ್ ಜಾಣತನ. 'ದುರಾದೃಷ್ಟ' ವಂತೂ ಕಟು ಸತ್ಯ. ಇಂಥ ಕಡೆ ಕವಿ ಕೇವಲ ಅಂತರ್ಮುಖಿ ಆಗಿಲ್ಲ... ಸಮಾಜಮುಖಿ, "ನಿಗೂಢ" ದಲ್ಲಿ ವಿದಗ್ದತೆ ಇದೆ. ಅಪರೂಪಕ್ಕೆ ಕವಿಯ ಭಾವುಕ ಭಾಷ್ಯವೊಂದು ಭಾವಗೀತೆಯಂತೆ ವಿಜೃಂಬಿಸಿದೆ. ಕವಿಯ ಈ ಸಂಕಲದ ಚೊಚ್ಚಲ ಸಂಭ್ರಮದ ಸಂಕೇತ ಅದು.
ನೀ ವೇಣು ಊದಿದೆ ಕೃಷ್ಣಾ,
ನಾ ರಾಧೆ, ಕರಗಿ ನೀರಾದೆ!
ಬಾಳಿಲ್ಲ ನನಗೆ ನೀನಿರದೆ...
ನನ್ನ ತುಟಿಯ ಪಿಸುರಾಗಕ್ಕೆ ನಾ ಉಸಿರಾದೆ!
ವೇಣುಗಾನದಲ್ಲಿ ಈಗ ಬರಿದೆ
ಪ್ರೀತಿ ರಾಗ ಹೊಮ್ಮಿದೆ...
ಪ್ರೇಮಲೋಕಕ್ಕೆ ರಾಧೆ ಹೆಸರ-
ನೀ ಧಾರೆಯೆರದೆ !
(ನೀ..ರಾಧೆ)
ಹೇಳುವುದಿನ್ನೇನಿದೆ, ರಾಧೆಯ ಅಳಲೇ ಕೋಡಿ ಹರಿದಿದೆ
( ಇಂಥ ಎನಿತು ಜನ ಇದ್ದಾರೋ ಈ ದುನಿಯಾದಲ್ಲಿ!)
ಕಾವಿತೊಟ್ಟವರ, ಖಾಧಿ ಧರಿಸಿದವರ ಕವಿಯು ಸಕಾರಣವಾಗಿಯೇ ಲೇವಡಿ ಮಾಡುತ್ತಾರೆ. ಉದ್ದೇಶ ಇಷ್ಟೆ ! ರೋಗಗ್ರಸ್ತ ಸಮಾಜಕ್ಕೆ ಕಾಯಕಲ್ಪ! (ನಿದರ್ಶನ : ಪರ್ಣಕುಟಿ).
"ಪಾಪಿ"ಎಂಬ ಬರಹ ಚಿಕ್ಕದಾಗಿದ್ದರೂ ಚೊಕ್ಕದಾಗಿದೆ.ಓ! ಹೆನ್ರಿ ಕಥೆಗಳಂತೆ ಅಂತ್ಯದಲ್ಲಿ ಯಾರೂ ಊಹಿಸಿರದ ಹೊಸ ತಿರುವು. ಕವಿ ತುಂಬಾ ಜಾಣ!! ಇಡೀ ಸಂಕಲನ ಕವಿ ಶಾಂತಾರಾಮ್ ಅವರ ಬರೆಯದ ದಿನಚರಿಯಂತಿದೆ; ಇಲ್ಲಿನ ಪದ್ಯಗಳನ್ನು ಸ್ವಲ್ಪ ಶ್ರಮವಹಿಸಿ ಜೋಡಿಸಿದರೆ ಕವಿಯ ಡೈರಿಯೇ ಸಿಕ್ಕಂತಾಗುತ್ತದೆ. ರಸಿಕರಿಗೆ ಅದರಲ್ಲಿ ಖುಷಿ ಸಿಗುತ್ತದೆ. "ಪ್ರೇಮ ಕವಿ" ಒಳ್ಳೆಯ ನಗೆ ಹನಿಯಾಗಿದೆ. ಬುದ್ಧ ಮತ್ತು ಬದ ಕವಿಯ ಚಾಣಾಕ್ಷವಾದ ವ್ಯಾಖ್ಯಾನಕ್ಕೆ ಬಿಳಿಖಾಳೆಯ ಮೇಲೆ ಕೆತ್ತಿದ ವಿಮರ್ಶಾ ಶಾಸನವೆಂಬಂತಿದೆ.
"ನ್ಯಾಯ ಎಲ್ಲಿ ? ಸಿರಿವಂತನ ಜೇಬಿನಲ್ಲಿ !"
ನಮ್ಮ ನಡುವಿನ ಈ ಹೊಸ ಕವಿ ಶಾಂತಾರಾಮ್ ವಿ. ಶೆಟ್ಟಿ ಅವರು ಸಮಾಜದ ಉದ್ದಗಲ ಅಳೆದಿದ್ದಾರೆ. ಕವಿ ಏಕಾಂಗಿಯಲ್ಲ. ಸಂಘ ಜೀವಿಯೇ! ಆದ್ದರಿಂದ ಸಮುದಾಯದ ಕಾಳಜಿ ಇಲ್ಲಿ ಆರೋಗ್ಯಕರವಾಗಿದೆ. ಈ ಕವಿಅ ಇಡೀ ಸಂಕಲನ ಹಾಸ್ಯ ಪ್ರಜ್ಞೆಯ ಪುಟ್ಟ ವಜ್ರ ಸಂಪುಟ ; ಪುಟ ಪುಟವೂ ಕುತೂಹಲ ಮೂಡಿಸುತ್ತದೆ. ನಮ್ಮ ದೃಷ್ಟಿಕೋನಕ್ಕೆ ತದ್ವಿರುದ್ಧವಾದ ಕವಿಯ ವಕ್ರನೋಟ-ಬಹುಷಃ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಪ್ರತಿ ಪದ್ಯದಲ್ಲೂ ಬಾಳಿನ ವೈರುಧ್ಯಗಳನ್ನು ಹೇಳುವಲ್ಲಿ ಸಫಲವಾಗಿವೆ,
ಕವಿಯದೇ ಮಾತು ; ಕೆಲವೊಮ್ಮೆ ಸುಳ್ಳುಗಳೂ ಈ ಭೂಮಿಯಲ್ಲೇ ಸ್ವರ್ಗ ಸೃಷ್ಟಿಸುತ್ತವೆ. ಸಿರಿತನ, ಪರಿಸ್ಥಿತಿ, ಕಟುಸತ್ಯ, ಸುಳ್ಳಿನೊಳಗೊಂದು ಸತ್ಯ ಕವಿಯ ೯ಶ್ರೀ ಶಾಂತಾರಾಮ್ ವಿ.ಶೆಟ್ಟಿ)ಅಪ್ಪಟ ಅಕ್ಕರೆ "ಅರ್ರಂಗ್ರೇಟಂ" ಆಗಿದೆ.ಎಲ್ಲ ಬಲ್ಲವರಿಲ್ಲ....ಬಲ್ಲವರು ಬಹಳಿಲ್ಲ..ಎಲ್ಲರೂ ಹಾಸ್ಯ ಸಾಹಿತ್ಯ ಬರೆಯಲಾಗುವುದಿಲ್ಲ. ಶಾಂತಾರಾಮ್ಗೆ ಅದು-ಅವರ ಉಸಿರಾಟದಷ್ತೇ ಸಲೀಸು ಎಂಬುದಂತೂ ಸತ್ಯ!!
ಕವಿ ಶಾಂತಾರಾಮ್ ಶೆಟ್ಟಿ ಅವರ ಸಂಕಲನದಲ್ಲಿ ಓದುಗರು ಮೆಲುಕು ಹಾಕಬಹುದಾದ ವಾಗಾರ್ಥಪೂರ್ಣ ಕಾವ್ಯಾತ್ಮಕ ಸಾಲುಗಳು ಹೀಗಿವೆ :
ಸತ್ತವರು ಸತ್ತಿದ್ದಾರೆ ಅನ್ನೋದು ಮಾತ್ರ ಸತ್ಯ-
ನಂಬಲೇ ಬೇಕು...ಸತ್ತವರು ಬದುಕಿಲ್ಲ!
*** (ಕಟು ಸತ್ಯ)
ಸತ್ಯದ ಮುಖ ಪರಿಚಯವೇ ಸುಳ್ಳಿಗಿಲ್ಲ !
* * * (ಸುಳ್ಳಿನೊಳಗೊಂದು ಸತ್ಯ)
ದೊರೆಗೂ ಬಡತನವಿತ್ತು...
ಹಸಿದ ತಿರುಕನಿಗೆ ಭಿಕ್ಷೆ ನೀಡಲಿಲ್ಲ!
ತಿರುಕನಿಗೂ ಸಿರಿತನವಿತ್ತು...
ತಾನೂ ಉಂಡ, ಮೊದಲ ತುತ್ತು ನಾಯಿಗಿತ್ತು !
* * * (ಸಿರಿತನ)
ಕರಿ ಹಲಗೆಯ ಮೇಲೆ-
ಕಲಿಸಲಾಗದ ಹಸಿವಿನ ಅಕ್ಷರಗಳನ್ನು
ರೈತ ನೇಗಿಲ ಗೆರೆಗಳಲ್ಲಿ ಗೀಚಿದ !
* * * (ಅನ್ನಬ್ರಹ್ಮ)
ಹೀಗೆ ಕವಿ ಮಾರ್ಮಿಕವಾಗಿ ನುಡಿ ಹೆಣಿಗೆ ಮಾಡುತ್ತಾರೆ. ವಿಚಾರ ಮುಖ್ಯವಾಗುತ್ತದೆ. ಈ ಕವಿಯ ಒಲವು-ನಿಲುವು ನಿಜಕ್ಕೂ ವೈನೋಧಿಕವಾಗಿರುವುದು ಅಭಿನಂದನೀಯ -
-ದೊಡ್ಡರಂಗೇಗೌಡ
Binding
Soft Bound
Publisher
Total Kannada
Publication Year
2018
Number of Pages
108
Author
Shantaram V Shetty
ISBN-13
9789383727230
Width
1 CMS
Height
10 CMS
Length
10 CMS
Weight
100 GMS
Language
Kannada